ಸೂಳೆಯೆಂದು ಜರಿಯುವ ಮುನ್ನ ನೂರು ಬಾರಿ ಆಲೋಚಿಸಿ!
ಬೆಂಗಳೂರಿನಂಥಾ ಮಹಾ ನಗರಗಳಲ್ಲಿ ಬೇರೂರಿಕೊಂಡಿರೋ ದಂಧೆಗಳು ಒಂದೆರಡಲ್ಲ. ಅಲ್ಲಿ ದುಡಿದು ಬದುಕುವವರಿಗೆ ಅಗಾಧ ಅವಕಾಶಗಳಿವೆ. ಬೇರೆಯವರನ್ನ ಹುರಿದು ಮುಕ್ಕುವ ರಕ್ಕಸರಿಗೂ ಕೂಡಾ ಅಂಥಾದ್ದೇ ಅವಕಾಶಗಳಿವೆ. ನೀವೇನಾದರೂ ಬೆಂಗಳೂರಿನಂಥಾ ನಿವಾಸಿಗಳಾಗಿದ್ದರೆ, ಅಪರೂಪಕ್ಕಾದರೂ ಅಲ್ಲಿಗೆ ಹೋಗಿ ಬಂದ ಅನುಭವವಿದ್ದರೆ ಕಂಡ ಕಂಡಲ್ಲಿ ಸನ್ನೆಗಳ ಮೂಲಕ ಸೆಳೆಯೋ ಬೆಲೆವೆಣ್ಣುಗಳನ್ನು ಗಮನಿಸಿರುತ್ತೀರಿ. ಸಿಂಗಾರಗೊಂಡು, ಉದ್ರೇಕಿಸುವಂಥಾ ಮಾದಕ ನೋಟ ಬೀರುತ್ತಾ ಗಿರಾಕಿಗಳಿಗಾಗಿ ಕಾದು ಕೂತ ಈ ಜೀವಗಳಿಗೆ ಸಭ್ಯ ಸಮಾಜ ಸೂಳೆಯರೆಂಬ ಪಟ್ಟ ಕೊಟ್ಟಿದೆ. ಸಭ್ಯ ಭಾಷೆಯಲ್ಲದಕ್ಕೆ ವೇಶ್ಯಾವಾಟಿಕೆ ಅನ್ನಲಾಗುತ್ತೆ. ವಾಸ್ತವವೆಂದರೆ, ಮೇಲುನೋಟಕ್ಕೆ ಆ ಜೀವಗಳ ಬಗ್ಗೆ ಅಸಹ್ಯ ಹೊಂದಿರುವವರೇ ರಾತ್ರಿ ಹೊತ್ತಲ್ಲಿ ಗಿರಾಕಿಗಳಾಗೋದೂ ಇದೆ. ಆದರೆ, ಹಾಗೆ ಬೀದಿಯಲ್ಲಿ ಕೈಚಾಚಿ ನಿಂತವರ ಹಿಂದೆ ಅದೆಂಥಾ ಕರುಣಾಜನಕ ಕಥೆಗಳಿರಬಹುದು, ಅವರ ನೋವೆಂಥಾದ್ದು, ಯಾರದ್ದೋ ಮನೆಯ ಕೂಸಾಗಿ ಹುಟ್ಟಿದ್ದ ಆ ಹೆಣ್ಣುಮಕ್ಕಳನ್ನು ಈ ರೀತಿ ಬೀದಿಗಿಳಿಸಿದ ದುಷ್ಟ ವ್ಯವಸ್ಥೆ ಯಾವುದೆಂಬುದರ ಬಗ್ಗೆ ಬಹುತೇಕರು ಯೋಚಿಸೋ ಗೋಜಿಗೆ ಹೋಗುವುದಿಲ್ಲ.
ವೇಶ್ಯಾವಾಟಿಕೆ ಅಂದಾಕ್ಷಣ ಕಾಮದ ಕಮಟು ಮಾತ್ರವೇ ಮುತ್ತಿಕೊಳ್ಳುತ್ತೆ. ಹಾದಿ ಬಿಟ್ಟ ಹೆಣ್ಣು ಮಕ್ಕಳು ಆ ದಂಧೆಗಿಳಿಯುತ್ತಾರೆಂಬಂತೆ ಈ ಸಮಾಜ ಷರಾ ಬರೆದು ಬಿಟ್ಟಿದೆ. ಈವತ್ತಿಗೆ ಹೆಣ್ಣುಮಕ್ಕಳನ್ನು ಹೇಗೆಲ್ಲಾ ಕಾಮ ಕೂಪಕ್ಕಿಳಿಸುತ್ತಾರೆಂಬ, ಆ ದಂಧೆಯ ಹಿಂದೆ ಎಂತೆಂಥಾ ಮಾಫಿಯಾಗಳಿವೆ ಎಂಬ ಬಗ್ಗೆ ಜನಸಾಮಾನ್ಯರಿಗೂ ಗೊತ್ತಿದೆ. ಆದರೆ ಈ ಕ್ಷಣಕ್ಕೂ ಹೆಣ್ಣುಮಕ್ಕಳು ತಾವೇ ಇಷ್ಟಪಟ್ಟು ವೇಶ್ಯಾವಾಟಿಕೆಗಿಳಿಯುತ್ತಾರೆ ಅಂದುಕೊಂಡವರ ಸಂಖ್ಯೆ ಜಾಸ್ತಿಯಿದೆ. ಆದರೆ, ಅದರ ಹಿಂದಿರೋದು ಲಾಗಾಯ್ತಿನಿಂದ ಚಾಲ್ತಿಯಲ್ಲಿರೋ ಮಾನವ ಕಳ್ಳ ಸಾಗಣೆ ಜಾಲ. ಹ್ಯೂಮನ್ ಟ್ರಾಫಿಕಿಂಗ್ ಅಂತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಿರೆಸಿಕೊಳ್ಳೋ ಈ ಅನಿಷ್ಟ ವಿಷವರ್ತುಲಕ್ಕೆ ನಮ್ಮ ದೇಶವೊಂದರಲ್ಲಿಯೇ ವರ್ಷವೊಂದಕ್ಕೆ ಸಾವಿರಾರು ಎಳೇಯ ಹೆಣ್ಣುಮಕ್ಕಳು ಬಲಿಯಾಗುತ್ತಿದ್ದಾರೆ.
ಪ್ರೀತಿಸೋ ನಾಟಕದ ಮೂಲಕ, ಅಪಹರಣಗಳ ಮೂಲಕ ಹೆಣ್ಣುಮಕ್ಕಳನ್ನು ವೇಶ್ಯಾವಾಟಿಕೆಯ ಕೂಪಕ್ಕೆ ತಳ್ಳೋ ಕಥೆಗಳನ್ನ ಸಿನಿಮಾಗಳಲ್ಲಿ ನೋಡಿರುತ್ತೇವೆ. ಅದೊಂದು ಸಿನಿಮಾ ಕಥೆ ಮಾತ್ರ, ವಾಸ್ತವದಲ್ಲಿ ಅಂಥಾದ್ದೆಲ್ಲ ನಡೆಯೋದಿಲ್ಲ ಅಂತ ನಮ್ಮನ್ನು ನಾವೇ ಸಮಾಧಾನಿಸಿಕೊಳ್ಳುತ್ತೇವೆ. ಆದರೆ ವಾಸ್ತವದಲ್ಲಿ ನಡೆಯೋ ಕ್ರೌರ್ಯಗಳ ಕಥೆಯ ಮುಂದೆ ಸಿನಿಮಾ ಸೀನುಗಳೇ ಡಲ್ಲು ಹೊಡೆಯುತ್ತವೆ. ಯಾಕೆಂದರೆ, ಕೆಲಸ ಕೊಡಿಸೋ ನೆಪದಲ್ಲಿಯೂ ಹುಡುಗೀರನ್ನು ಪಾಪಕೂಪಕ್ಕೆ ತಳ್ಳುವ ಕಿರಾತಕರು ಇಲ್ಲಿದ್ದಾರೆ. ಇತ್ತೀಚೆಗಷ್ಟೇ ಉತ್ತರ ಭಾರತ ಮೂಲಕ ಮೂವರು ಹೆಣ್ಣು ಮಕ್ಕಳು ಹೀಗೆಯೇ ವಂಚನೆಗೀಡಾಗಿ ತಪ್ಪಿಸಿಕೊಂಡಿದ್ದರು. ಅದು ಹೇಗೋ ಯಶವಂತಪುರ ರೈಲ್ವೇ ನಿಲ್ದಾಣದ ಬಳಿ ಅವರನ್ನು ಪೊಲೀಸರು ರಕ್ಷಿಸಿದ್ದರು. ಈ ಮೂಲಕ ಹ್ಯೂಮನ್ ಟ್ರ್ಯಾಫಿಕಿಂಗ್ ದಂಧೆ ಮತ್ತೆ ದೇಶಾದ್ಯಂತ ಸುದ್ದಿಯಲ್ಲಿದೆ.
ಹೀಗೆ ಯಶವಂತಪುರದಲ್ಲಿ ಪೊಲೀಸರಿಂದ ರಕ್ಷಿಸಲ್ಪಟ್ಟಿದ್ದರಲ್ಲಾ ಮೂವರು ಹುಡುಗಿಯರು? ಅವರೆಲ್ಲರೂ ಕೂಡಾ ಕೆಲಸದಾಸೆಯಿಂದ ಯಾಮಾರಿ ದುಷ್ಟರ ಬಲೆಗೆ ಬಿದ್ದವರು. ಚೆಂದಗೆ ಓದಿಕೊಂಡು ಕೆಲಸಕ್ಕಾಗಿ ಅರಸುತ್ತಿದ್ದ ಇವರನ್ನು ವಂಚಕರ ಗ್ಯಾಂಗು ಬೆಂಗಳೂರಿನಲ್ಲಿ ಕೆಸ ಕೊಡಿಸೋದಾಗಿ ನಂಬಿಸಿ ಕರೆ ತಂದಿತ್ತು. ಆದರೆ ಬೆಂಗಳೂರಿಗೆ ಬರುತ್ತಲೇ ನಡೆದದ್ದೇ ಬೇರೆ. ಕಿಷ್ಕಿಂಧೆಯಂಥಾ ಗಲೀಜು ಕೊಠಡಿಯೊಂದರಲ್ಲಿ ಕೂಡಿ ಹಾಕಲಾಗಿತ್ತು. ಅದು ದಂಧೆಯ ಮನೆ ಅನ್ನೋದು ಗೊತ್ತಾಗುತ್ತಲೇ ಆ ಪಾಪದ ಹೆಣ್ಣು ಮಕ್ಕಳು ಜೀವದಾಸೆಯನ್ನೂ ತೊರೆದು ಅದರಿಂದ ತಪ್ಪಿಸಿಕೊಂಡಿದ್ದರೂ. ಹಾಗೆ ನೋಡಿದರೆ, ಈ ಮೂವರೇ ಭಾಗ್ಯಂತರು. ಇನ್ನುಳಿದ ಪಾಪದ ಹೂವುಗಳಿಗೆ ಆ ಕೂಪದಿಂದ ಬಚಾವಾಗೋ ಅವಕಾಶವೇ ಸಿಗೋದಿಲ್ಲ. ಮೈಯಲ್ಲಿನ ಕಸುವು ತೀರುತ್ತಾ ಬಂದಾಗ ಈ ದಂಧೆಕೋರರೇ ಆ ಹುಡುಗೀರನ್ನು ಬೀದಿಗೆಸೆಯುತ್ತಾರೆ. ಆ ನಂತರ ಅವರ ಪಾಲಿಗುಳಿಯೋದು ನಗರಗಳಲ್ಲಿ ಕತ್ತಲಲ್ಲಿ ನಿಂತು ಗಿರಾಕಿಗಳಿಗಾಗಿ ಕೈಚಾಚೋ ಅವಕಾಶವಷ್ಟೇ.
ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಮಹಿಳೆಯರು ಮತ್ತು ಹೆಣ್ಣುಮಕ್ಕಳನ್ನು ಇಂಥಾ ದಂಧೆಗಿಳಿಸೋದು ಘೋರ ಅಪರಾದ. ಕಾನೂನಿನ ನೆಲೆಗಟ್ಟಿನಲ್ಲಿ ಮಾತ್ರವಲ್ಲ; ಮನುಷ್ಯತ್ವದ ಭೂಮಿಕೆಯಿಂದಲೂ ಅದು ರಕ್ಕಸ ಕೃತ್ಯ. ಆದರೆ ಅದನ್ನೇ ಕಾಸು ಗೆಬರುವ ಉದ್ದಿಮೆಯಂತೆ ಮಾಡಿಕೊಂಡ ಮಾಫಿಯಾ ನೆಟ್ವರ್ಕ್ಗಳು ದೇಶಾದ್ಯಂತ ಹಬ್ಬಿಕೊಂಡಿವೆ. ಈ ಮಂದಿ ಹೆಚ್ಚಾಗಿ ಎಳೇ ಪ್ರಾಯದ, ಹದಿನೆಂಟರ ಆಸುಪಾಸಿನ ಹುಡುಗೀರನ್ನೇ ಟಾರ್ಗೆಟ್ ಆಗಿಸಿಕೊಳ್ಳುತ್ತಾರೆ. ಅಂಥವರನ್ನು ಅಪಹರಣ, ಆಮಿಷಗಳ ಮೂಲಕ ವೇಶ್ಯಾ ದಂಧೆಗೆ ನೂಕುತ್ತಾರೆ. ಹೊರಜಗತ್ತನ್ನು ನೋಡಲೂ ಆಸ್ಪದ ಕೊಡದೆ ವರ್ಷಗಟ್ಟಲೆ ಕೊಠಡಿಯಲ್ಲಿ ನರಳಿಸಿ ವಿಕೃತಿ ಮೆರೆಯುತ್ತಾರೆ. ಇಂಥಾ ಹೆಣ್ಣುಮಕ್ಕಳನ್ನು ರಕ್ಷಿಸಿರುವ ಎನ್ಜಿಓ ಮಂದಿಯ ಮಾಹಿತಿಯ ಪ್ರಕಾರ ಹೇಳೋದಾದರೆ, ಈ ದಂಧೆಯ ಮಂದಿ ಇಪ್ಪತೈದು ವರ್ಷವಾದ ನಂತರ ಇಂಥಾ ಹುಡುಗೀರನ್ನು ಬೀದಿಗೆಸೆಯುತ್ತಾರೆ.
ಹಾಗೆ ಎಸೆಯಲ್ಪಟ್ಟ ಯಾರದ್ದೋ ಮನೆಯ ಮುದ್ದಿನ ಹೆಣ್ಮಕ್ಕಳು ಮತ್ತದೇ ನರಕದ ಬದುಕನ್ನೇ ಮುಂದುವರೆಸುವ ಅನಿವಾರ್ಯತೆ ಎದುರಾಗುತ್ತೆ. ಬೆಂಗಳೂರು ಸೇರಿದಂತೆ, ನಾನಾ ಭಾಗಗಳಲ್ಲಿ ಗಿರಾಕಿಗಳಿಗಾಗಿ ಅರಸಿ ಅಡ್ಡಾಡುವ ಹೆಂಗಸರಿರುತ್ತಾರಲ್ಲಾ? ಅವರಲ್ಲಿಯೂ ಇಂಥಾ ನರಕ ಕಂಡವರು ಇದ್ದೇ ಇರುತ್ತಾರೆ. ಅದು ಭಾವನೆಗಳೆಲ್ಲ ಘಾಸಿಗೊಂಡು ಸತ್ತೇ ಹೋದ ಬರೀಯ ದೇಹಗಳು ಮಾತ್ರ. ಈ ನಾಗರಿಕ ಮುಖವಾಡದ ಮಂದಿ ಆ ದೇಹಗಳ ಮೇಲೆ ಮಬ್ಬಿನಲ್ಲಿ ಸವಾರಿ ನಡೆಸುತ್ತಾರೆ. ಬೆಳಕಲ್ಲಿ ಅವರನ್ನೇ ಸೂಳೆಯರೆಂದು ಅಸಹ್ಯ ಪಡುತ್ತಾರೆ. ಇಂಥಾ ದುಷ್ಟ ಮಡಿವಂತಿಕೆಯ ನಡುವೆ ಆ ಹೆಣ್ಣುಮಕ್ಕಳ ಸಂಕಟ, ತೊಳಲಾಟಗಳೆಲ್ಲವೂ ಕಳೇದು ಹೋಗಿ ಬಿಡುತ್ತವೆ. ಹೀಗೆ ಪಾಪದ ಲೋಕದಲ್ಲಿ ನಿತ್ಯ ನರಳುವ ಒಂದೊಂದು ಜೀವಗಳ ಕಥೆ ಕೇಳಿದರೂ ಈ ಸಮಾಜದ ಮೇಲೊಂದು ಅಸಹ್ಯವಷ್ಟೇ ಉಳಿದುಕೊಳ್ಳುವಂತಾಗುತ್ತೆ. ಪೊಲೀಸ್ ವ್ಯವಸ್ಥೆ ಇಷ್ಟು ಬಲಗೊಂಡಿದ್ದರೂ, ಕಾನೂ ಕಟ್ಟಳೆಗಳು ಬಿಗಿಯಾಗಿದ್ದರೂ ಇಂಥಾ ರೌರವ ನರಕದಿಂದ ಹೆಂಗಳೆಯರನ್ನು ಪಾರು ಮಾಡಲಾಗಿಲ್ಲವೆಂದರೆ, ಅದಕ್ಕಿಂತ ನಾಚಿಕೆಗೇಡಿನ ಸಂಗತಿ ಬೇರ್ಯಾವುದಿದೆ?