ಇರಾನಿ ಗ್ಯಾಂಗ್ನಲ್ಲಿ ಎಂಥಾ ರಕ್ಕಸರಿದ್ದಾರೆ ಗೊತ್ತಾ?
ಇರಾನಿ ಗ್ಯಾಂಗ್ ಮತ್ತು ಬಾವರಿಯಾ ಗ್ಯಾಂಗ್… ಈ ಎರಡು ಹೆಸರು ಕೇಳಿದೇಟಿಗೆ ಖುದ್ದು ಪೊಲೀಸರೇ ಕೊಂಚ ಕಸಿವಿಸಿಗೊಳಗಾಗುತ್ತಾರೆ. ಹಣ ಮಾಡಲು ಕಳ್ಳತನ ಮತ್ತು ದರೋಡೆಯ ಮಾರ್ಗ ಆರಿಸಿಕೊಂಡಿರುವ ಈ ಎರಡೂ ಗ್ಯಾಂಗುಗಳ ಹೆಸರು ರಾಷ್ಟ್ರ ಮಟ್ಟದಲ್ಲಿ ಕುಖ್ಯಾತಿ ಗಳಿಸಿ ಬಹಳಷ್ಟು ವರ್ಷಗಳೇ ಸಂದಿವೆ. ಆದರೆ ಇದೀಗ ಕರ್ನಾಟಕದಲ್ಲಿಯೂ ಇದರ ಪ್ರತಾಪದ ಪತಾಕೆ ಪಟಪಟಿಸಲಾರಂಭಿಸಿದೆ. ಈ ಎರಡೂ ತಂಡಗಳೂ ಸಹ ಒಂದನ್ನೊಂದು ಮೀರಿಸುವಂತಿವೆ. ಕಾರ್ಯಾಚರಣೆಯ ರೀತಿ ರಿವಾಜುಗಳು ಬೇರೆಯದ್ದಾದರೂ ಉದ್ದೇಶ ಒಂದೇ. ಕದ್ದ ಕಾಸಲ್ಲೇ ಬದುಕುವ ಈ ಮಂದಿಯ ಅಟಾಟೋಪ, ಖಯಾಲಿ, ಕಿಲಾಡಿ ಬುದ್ಧಿ ಮತ್ತು ವಿಲಕ್ಷಣ ನಡವಳಿಕೆಗಳೆಲ್ಲವೂ ಪೊಲೀಸ್ ಇಲಾಖೆಗೇ ಸವಾಲಾದರೆ ಜನಸಾಮಾನ್ಯರಿಗೆ ಭಯ ಮತ್ತು ಬೆರಗು ಹುಟ್ಟಿಸಿವೆ. ಅಂದಹಾಗೆ ಇಂಥಾ ನಟೋರಿಯಸ್ ಗ್ಯಾಂಗ್ ಈಗ ನಮ್ಮ ರಾಜ್ಯದ ಹಳ್ಳಿಗಾಡಿನ ಜನರ ಜೀವ ತೆಗೆಯಲು ಹೊಂಚು ಹಾಕಿದಂತಿದೆ. ಅದರಲ್ಲಿಯೂ ಕಾಡಿನ ಇಕ್ಕೆಲದಲ್ಲಿರೋ ದಕ್ಷಿಣ ಕನ್ನಡ, ಮಲೆನಾಡು ಭಾಗಗಳಲ್ಲಿ ಈಗಾಗಲೇ ಈ ಗ್ಯಾಂಗು ವೇಷ ಮರೆಸಿಕೊಂಡು ಎಂಟ್ರಿ ಕೊಟ್ಟಿದೆಯಂತೆ. ಈ ಬಗ್ಗೆ ಕಳೆದ ವರ್ಷವೂ ಮಲೆನಾಡು ಭಾಗದ ಪೊಲೀಸ್ ಇಲಾಖೆ ಎಚ್ಚರಿಕೆ ಕೊಟ್ಟಿತ್ತು. ಈ ಬಾರಿಯೂ ಮಳೆಗಾಲದಲ್ಲಿ ಮತ್ತೆ ಇರಾನಿ ಗ್ಯಾಂಗಿನ ಭಯ ಶುರುವಾಗಿದೆ.
ಕಳೆದ ಒಂದಷ್ಟು ದಿನಗಳಿಂದ ಮಲೆನಾಡು ಭಾಗದಲ್ಲಿ ಇರಾನಿ ಗ್ಯಾಂಗ್ ಕುರಿತಾದ ಸುದ್ದಿಗಳು ವಾಟ್ಸಪ್, ಫೇಸ್ ಬುಕ್ಗಳಲ್ಲಿ ಹರಿದಾಡುತ್ತಿವೆ. ಮಲೆನಾಡಿನಲ್ಲಿ ಒಚಿಟಿ ಮನೆಗಳೇ ಅಧಿಕ. ಅಂಥಾ ಮನೆಗಳಿಗೆ ಮಳೆಗಾಲದಲ್ಲಿ ಕಂಬಳಿ, ರಗ್ಗು ಮುಂತಾದವನ್ನು ಮಾರಲು ಕೆಲ ಮಂದಿ ಬರೋದಿದೆ. ಒಂದು ಕಾಲದಲ್ಲಿ ಹಾಗೆ ಕಂಬಳಿ ಮಾರಲು ಬಂದವರು ಮಲೆನಾಡಿಗರ ಮನೆಗಳಲ್ಲಿಯೇ ತಿಂಗಳುಗಟ್ಟಲೆ ಇದ್ದು ಹೋಗುತ್ತಿದ್ದರು. ಅದು ನಂಬಿಕೆಯೇ ಉಸಿರಾಗಿದ್ದ ಕಾಲ. ಇದೀಗ ಅದೇ ಕಂಬಳಿ ರಗ್ಗು ಮಾರೋರ ಸೋಗಿನಲ್ಲಿ ಇರಾನಿ ಗ್ಯಾಂಗು ಎಂಟ್ರಿ ಕೊಟ್ಟಿದೆ ಎಂಬ ಆತಂಕ ಎಲ್ಲೆಡೆ ಹರಡಿಕೊಂಡಿದೆ. ಹಾಗಂತ ಇರಾನಿ ಗ್ಯಾಂಗಿನ ಕಂಟಕ ಮಲೆನಾಡಿಗೆ ಮಾತ್ರವೇ ಸೀಮಿತವಲ್ಲ. ಕರ್ನಾಟಕದ ಇತರೇ ಪ್ರದೇಶಗಳಿಗೂ ನಾನಾ ರೂಪಗಳಲ್ಲಿ ಲಗ್ಗೆಯಿಟ್ಟಿದೆಯಂತೆ. ಹಾಗಾದ್ರೆ ಈ ಇರಾನಿ ಗ್ಯಾಂಗ್ ಅಂದ್ರೇನು? ಅದೇನು ಇರಾನಿನಿಂದ ಬಂದಿಳಿದ ರಕ್ಕಸರ ಪಟಾಲಮ್ಮಾ? ಅದರ ಕಾರ್ಯಾಚರಣೆ ಹೇಗಿರುತ್ತೆ? ಅದರ ನಟೋರಿಸಿ ಏನೆಂಬ ಕೌತುಕ ನಿಮ್ಮಲ್ಲಿದ್ರೆ ತಪ್ಪದೇ ಈ ಸ್ಟೋರಿ ಕೇಳಿ…
ಮುಂಬಯಿಯಲ್ಲಿರುವ ಪುಟ್ಟ ಸ್ಲಂ ಪ್ರದೇಶವಾದ ಅಂಬಿವಲಿಯಲ್ಲಿರುವ ಇರಾನಿ ಕಾಲೊನಿ ಅಂದರೆ ಜನ ಸಾಮಾನ್ಯರಿರಲಿ, ಪೊಲೀಸರೂ ಒಂದು ಮಟ್ಟಕ್ಕೆ ಭಯ ಬೀಳುತ್ತಾರೆ. ಇತ್ತೀಚೆಗೆ ಬೆಂಗಳೂರನ್ನು ಕಂಗಾಲು ಮಾಡಿದ್ದರಲ್ಲಾ ಸರಗಳ್ಳರು? ಅವರಿಗೆಲ್ಲ ಈ ಇರಾನಿ ಕಾಲೊನಿಯೇ ಸೇಫಾದ ಬಿಲವಿದ್ದಂತೆ. ಇದರ ಕಾರ್ಯವಲಯ ಇಡೀ ಭಾರತದ ತುಂಬಾ ಹರಡಿಕೊಂಡಿದೆ. ದೇಶದ ಬಹುತೇಕ ರಾಜ್ಯಗಳಲ್ಲಿ ಇರಾನಿ ಗ್ಯಾಂಗ್ ನಿರಂತರವಾಗಿ ಸರಗಳ್ಳತನ ಮಾಡುತ್ತಿದೆ. ಈ ಗ್ಯಾಂಗ್ ಹಿಂಸಾತ್ಮಕ ಮಾರ್ಗ ಅನುಸರಿಸದೆ ಒಡವೆಗಳನ್ನು ಅಪಹರಿಸುತ್ತದೆ. ಆದರೆ ಇವರ ಕಳ್ಳತನದ ಪಟ್ಟುಗಳು ಮಾಮೂಲಿ ಕಳ್ಳರಂತಿರೋದಿಲ್ಲ. ಇವರೆಲ್ಲ ಭಲೇ ಚಾಲಾಕಿಗಳು. ಮಹಾ ಕ್ರಿಮಿನಲ್ ಹುಳುಗಳು. ಈ ಇರಾನಿ ಕಾಲೋನಿಯಲ್ಲಿ ಅದಾಗ ತಾನೇ ಬುದ್ಧಿ ಬಲಿತ ಮಗುವೂ ಸಹ ಕಳ್ಳತನದ ಪಟ್ಟುಗಳನ್ನು ಕರತಲಾಮಲಕ ಮಾಡಿಕೊಂಡಿರುತ್ತದೆ.
ಹಾಗಂತ ಇವರೇನು ಇರಾನಿನಿಂದ ಇದೀಗ ತಾನೇ ಬಂದಿಳಿದವರಲ್ಲ. ಇರಾನಿಗೂ ಇವರಿಗೂ ಅಂಥಾ ಸಂಬಂಧಗಳೂ ಇಲ್ಲ. ಅನಾದಿ ಕಾಲದಿಂದಲೂ ಭಾರತದಲ್ಲಿದ್ದ ಈ ಜನಕ್ಕೆ ಈಗಿನ ಇರಾನಿ ಕಾಲೊನಿಯಲ್ಲಿ ಸರ್ಕಾರವೇ ಆಶ್ರಯ ನೀಡಿತ್ತು. ಆಸುಪಾಸಿನವರ ಮಟ್ಟಿಗೆ ಸಭ್ಯರೆಂದೇ ಗುರುತಿಸಿಕೊಳ್ಳುತ್ತಿದ್ದ ಇವರ ಅಸಲೀ ದಂಧೆ ಏನೆಂಬುದು ಜನರಿಗೆ ತಿಳಿದದ್ದು ತೀರಾ ಇತ್ತೀಚೆಗೇ. ಇವರು ಏನು ಕೆಲಸ ಮಾಡುತ್ತಾರೆ ಎಂಬ ವಿಚಾರ ಮುಂಬೈ ಪೊಲೀಸರಿಗೂ ಗೊತ್ತಿರಲಿಲ್ಲ ಅಂದರೆ ನಿಮಗೆ ಅಚ್ಚರಿಯಾದೀತೇನೋ. ಅದಕ್ಕೆ ಕಾರಣ ಇವರ ಚಾಲಾಕಿತನ. ಯಾಕೆಂದರೆ, ಅನ್ಯ ರಾಜ್ಯಗಳಲ್ಲಿ ಕಳವು ಮಾಡುತ್ತಿದ್ದ ಈ ತಂಡ ಅಪ್ಪಿತಪ್ಪಿಯೂ ಮುಂಬೈನಲ್ಲಿ ಬಾಲ ಬಿಚ್ಚುತ್ತಿರಲಿಲ್ಲ. ಆದರೆ ಬೇರೆ ಬೇರೆ ರಾಜ್ಯಗಳ ಪೊಲೀಸ್ ಅಧಿಕಾರಿಗಳು ಮಾತ್ರ ಮೆಲ್ಲಗೆ ತಮ್ಮಲ್ಲಿ ನಡೆದ ಕಳ್ಳತನದ ಜಾಡು ಹಿಡಿದು ಈ ಇರಾನಿ ಕಾಲೋನಿಯತ್ತ ಬರಕಲಾರಂಭಿಸಿದ್ದರು. ಇಡೀ ದೇಶ ಇರಾನಿ ಕಾಲೊನಿಯತ್ತ ದೃಷ್ಟಿ ನೆಟ್ಟಿದ್ದು ಆವಾಗಲೇ!
ಹಾಗಂತ ಕಳ್ಳರು ಈ ಕಾಲೋನಿಯೊಳಗೇ ಇದ್ದಾರೆಂದರೂ ಸಲೀಸಾಗಿ ಬಂಧಿಸುವಂತಿಲ್ಲ. ಎಲ್ಲರೂ ಸೇರಿ ಪೊಲೀಸರನ್ನೇ ಥರಥರದಲ್ಲಿ ಕಂಗಾಲು ಮಾಡಿ ಹಾಕುತ್ತಾರೆ. ಇಂಥಾ ನಟೋರಿಯಸ್ ಗ್ಯಾಂಗಿಗೆ ಒಬ್ಬ ಮುಖ್ಯಸ್ಥ ಇರಲೇ ಬೇಕಲ್ಲ? ಆತ ಲಾಲಾ ಸಮೀರ್ ಜಾಫರ್ ಹುಸೇನ್. ಪಕ್ಕಾ ಪೊಲೀಸರಂತೆ ವೇಷ ಧರಿಸಿ ನಿರ್ಜನ ರಸ್ತೆಗಳಲ್ಲಿ ನಿಲ್ಲುವ ಈ ಖದೀಮರು ಯಾವುದೇ ಹಿಂಸೆ ನಡೆಸದೇ ನಾಜೂಕಿನಿಂದ ಮಹಿಳೆಯರ ಒಡವೆ ಕದ್ದು ಪರಾರಿಯಾಗುತ್ತಾರೆ. ನೂರಾರು ಮೈಲಿ ದೂರವಿರುವ ಮುಂಬೈನಿಂದ ಮೂವತ್ತು ತಾಸುಗಳಲ್ಲಿ ಉದ್ಯಾನಗರಿಗೆ ಓರ್ವ ಮಹಿಳೆ ಸೇರಿ ಏಳು ಜನರ ತಂಡ ಬಂದು ಕೆಲವೇ ತಾಸುಗಳಲ್ಲಿ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗುತ್ತಾರೆಂದರೆ ಈ ತಂಡ ಅದಿನ್ನೆಂಥಾ ಚಾಲಾಕಿಯಿರಬಹುದೆಂದು ಅರಿವಾಗುತ್ತದೆ. ಯಾವುದೇ ಬಾಲಿವುಡ್ ಚಲನಚಿತ್ರಕ್ಕೂ ಕಡಿಮೆ ಇಲ್ಲದಂತೆ ಕಾರು ಹಾಗೂ ಬೈಕ್ನಲ್ಲಿ ನಗರಕ್ಕೆ ಆಗಮಿಸಿ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಲೂಟಿ ಮಾಡಿ ಪರಾರಿಯಾಗುವ ಹಾಗೂ ಬೆಂಗಳೂರು ಪೊಲೀಸರಿಗೆ ತಲೆ ನೋವಾಗಿರುವ ಈ ಇರಾನಿ ಗ್ಯಾಂಗ್ ಈಗಲೂ ಪೊಲೀಸರ ಪಾಲಿಗೆ ತಲೆನೋವೇ. ಇದೀಗ ಅದರ ಹಾವಳಿ ರಾಜ್ಯದ ಮೂಲೆ ಮೂಲೆಗೂ ಹಬ್ಬಿಕೊಂಡಿದೆ.
ಮುಂಬೈ ನಗರದ ಗ್ರಾಮಾಂತರದ ಥಾಣೆಯ ಕಲ್ಯಾಣ ಪ್ರದೇಶದಲ್ಲಿ ಅಂಬಾವಾಡಿ ಹಾಗೂ ಬಿಪ್ಪಾಂಡಿ ಎಂಬ ಬಡವಾಣೆಗಳಿವೆ. ಈ ಪ್ರದೇಶಗಳಿಂದ ಬರುವ ಖದೀಮರೇ ಬೆಂಗಳೂರಲ್ಲಿಯೂ ಕೈಚಳಕ ತೋರಿಸುತ್ತಾರೆ. ಮಧ್ಯಾಹ್ನದ ಹೊತ್ತಿಗೆ ಕಾರು ಹಾಗೂ ಎರಡು ಬೈಕ್ಗಳಲ್ಲಿ ಏಳರಿಂದ ಎಂಟು ಮಂದಿ ಸದಸ್ಯರ ಇರಾನಿ ತಂಡ ಬೆಂಗಳೂರಿಗೆ ಪ್ರಯಾಣ ಬೆಳೆಸುತ್ತದೆ. ಈ ತಂಡದಲ್ಲಿ ಚಾಲಕ, ಇಬ್ಬರು ಬೈಕ್ ರೈಡರ್, ನಾಲ್ವರು ಫೀಲ್ಡ್ಗೆ ಇಳಿಯುವವರು ಹಾಗೂ ದೋಚಿದ ವಸ್ತುಗಳನ್ನು ಸಾಗಿಸಲು ಒಬ್ಬ ಮಹಿಳೆ ಇರುತ್ತಾರೆ. ಮುಂಬೈನಿಂದ ಹೊರಟ್ಟವರು ಊಟ-ತಿಂಡಿಗೆ ಹೊರತುಪಡಿಸಿ ಎಲ್ಲೂ ಕೂಡ ವಿಶ್ರಾಂತಿಗೆ ನಿಲ್ಲದೆ ಪ್ರಯಾಣಿಸುತ್ತಾರೆ. ಬೆಳಗ್ಗೆ ಉದ್ಯಾನನಗರಿಗೆ ಕಾಲಿಡುವ ಈ ತಂಡ, ನಗರದ ಹೊರವರ್ತುಲ ರಸ್ತೆಗಳಲ್ಲಿ ಕಾರು ನಿಲ್ಲಿಸುತ್ತದೆ. ನಂತರ ಬೈಕ್ನಲ್ಲಿ ನಾಲ್ಕು ಮಂದಿ ತಕ್ಷಣವೇ ಕಾರ್ಯಾಚರಣೆ ಆರಂಭಿಸುತ್ತಾರೆ. ಕೆಲವೇ ತಾಸುಗಳು ಅಂದರೆ ಒಂದು ಗಂಟೆಯಿಂದ ಎರಡು ಗಂಟೆಯೊಳಗೆ ಲಕ್ಷಾಂತರ ರೂ ಮೌಲ್ಯದ ಚಿನ್ನದ ಒಡವೆ ದೋಚಿಗಳನ್ನು ಅಷ್ಟೇ ಬಿರುಸಾಗಿ ನಗರದಿಂದ ಪರಾರಿಯಾಗುತ್ತಾರೆ. ಈ ಕೃತ್ಯ ಎಸಗಿದ ಬಳಿಕ ತಮ್ಮ ತಂಡ ಸದಸ್ಯೆಯ ಸುಪರ್ದಿಗೆ ದೋಚಿದ ಒಡವೆಗಳನ್ನು ಕೊಟ್ಟು, ಆಕೆಯನ್ನು ಮುಂಬೈಗೆ ಬಸ್ ಹತ್ತಿಸುತ್ತಾರೆ. ನಂತರ ಈ ಖದೀಮರು ದಾಖಲೆ ಪಕ್ಕಾ ಇರೋ ಕಾರಿನಲ್ಲಿ ಮಿಂಚಿನಂತೆ ಮರೆಯಾಗುತ್ತಾರೆ!
ಇರಾನಿ ತಂಡ ಕೆಲಸ ಮುಗಿದ ಬಳಿಕ ತಪ್ಪಿಸಿಕೊಳ್ಳಲು ಅನುಕೂಲವಾಗುವುದಕ್ಕಾಗಿಯೇ ರಿಂಗ್ ರೋಡ್ನ ಹತ್ತಿರದ ಪ್ರದೇಶಗಳನ್ನೇ ತಮ್ಮ ಕಾರ್ಯ ಕ್ಷೇತವನ್ನಾಗಿ ಆಯ್ಕೆ ಮಾಡಿಕೊಳ್ಳುತ್ತದೆ. ಹಾಗೆ ಐವತ್ತು ವರ್ಷ ದಾಟಿದವರೇ ಈ ಗ್ಯಾಂಗ್ನ ಪ್ರಮುಖ ಟಾರ್ಗೆಟ್. ವಂಚಿಸುವುದು ಇರಾನಿ ಸಮುದಾಯದ ಕುಲ ವೃತ್ತಿ. ದೇಶದ ಎಲ್ಲಡೆ ಅವರು ನೆಲೆಗೊಂಡು ತಮ್ಮ ವೃತ್ತಿಯನ್ನು ಮುಂದುವರೆಸಿದ್ದಾರೆ. ಹೀಗಾಗಿ ಇರಾನಿ ಗ್ಯಾಂಗ್ ರಾಷ್ಟ್ರದ ಪೊಲೀಸರ ಪಾಲಿಗೂ ಸವಾಲಾಗಿದೆ. ಈ ತಂಡಕ್ಕೂ, ಕೆಲ ನೀತಿ ರಿವಾಜುಗಳಿವೆ. ಜನರಿಗೆ ದೈಹಿಕವಾಗಿ ತೊಂದರೆಯುಂಟು ಮಾಡದೆ ವಂಚಿಸಿ ಲಾಭ ಮಾಡುವುದು ನಿಯಮ. ಹೀಗಾಗಿ ಅವರು ಗಮನ ಬೇರೆಡೆ ಸೆಳೆದು ವಂಚಿಸುತ್ತಾರೆ ಹೊರತು ಹಣಕ್ಕಾಗಿ ಕೊಲೆಯಂತಹ ಕೃತ್ಯ ಕೈ ಹಾಕುವುದಿಲ್ಲ. ಆದರೆ, ಈಚಿನ ಆ ಸಮುದಾಯದ ಯುವಕರು ದರೋಡೆ ಕೃತ್ಯಗಲ್ಲಿಯೂ ಪಾಲ್ಗೊಂಡು ಸಂಪ್ರದಾಯ ಮುರಿಯುತ್ತಿದ್ದಾರೆ.
ಈ ಸರಗಳ್ಳತನದಲ್ಲಿ ಇರಾನಿ ಗ್ಯಾಂಗನ್ನೇ ಮೀರಿಸುವಂತಿರುವುದು ಬಾವರಿಯಾ ಗ್ಯಾಂಗ್. ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಕೈರಾಣ ತಾಲೂಕಿನ ಜಿಂಜಾಣ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಗಳಲ್ಲಿ ಈ ಗ್ಯಾಂಗ್ನ ಸದಸ್ಯರಿದ್ದಾರೆ. ಬಾವರಿಯಾ ಗ್ಯಾಂಗ್ ಒಂದು ಬಾರಿ ಕಳ್ಳತನ ನಡೆಸಿ ವಾಪಾಸ್ ಉತ್ತರ ಪ್ರದೇಶಕ್ಕೆ ಹೋಗಿ ನೆಲೆಸಿಬಿಡುತ್ತದೆ. ಒಂದು ವೇಳೆ ಉತ್ತರ ಪ್ರದೇಶದಲ್ಲೇನಾದರೂ ಅಪರಾಧ ನಡೆಸಿದರೆ, ಬೆಂಗಳೂರಿಗೆ ಬಂದು ತಲೆ ಮರೆಸಿಕೊಳ್ಳುತ್ತದೆ. ಈ ಗ್ಯಾಂಗ್ ಕೆಲ ಸಂದರ್ಭದಲ್ಲ್ಲಿ ಎಂಥಾ ಹಿಂಸೆಯನ್ನಾದರೂ ನಡೆಸಿ ಕಳ್ಳತನ ಮಾಡುತ್ತದೆ. ಈ ವಿಚಾರದಲ್ಲಿ ಬವಾಶವರಿಯಾ ಗ್ಯಾಂಗುಇನದ್ದು ಇರಾನಿ ಗ್ಯಾಂಗಿಗಿಂತಲೂ ನಟೋರಿಟಿ ತುಸು ಹೆಚ್ಚೇ.
ಇದೀಗ ಬೆಂಗಳೂರು ಮಾತ್ರವಲ್ಲದೇ ಇಡೀ ರಾಜ್ಯದ ತುಂಬಾ ಈ ಗ್ಯಾಂಗ್ ಪಸರಿಸಿದೆ. ಒಳಪ್ರದೇಶಗಳಲ್ಲಿ ನೆಲೆಯನ್ನೂ ಕಂಡುಕೊಂಡಿದೆ. ಈ ತಂಡವನ್ನು ಬಗ್ಗು ಬಡಿಯಲು ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಸೂಪರ್ ಕಾಪ್ಗಳ ಸಿಸಿಬಿ ತಂಡವೂ ಅಖಾಡಕ್ಕಿಳಿದಿದೆ. ಮಲೆನಾಡು ಭಾಗದ ಅಷ್ಟೂ ಪೊಲೀಸ್ ಠಾಣೆಗಳಲ್ಲಿಯೂ ಇರಾನಿ ಗ್ಯಾಂಗಿನತ್ತ ಕಣ್ಣಿಡಲಾಗಿದೆ. ಇದೆಲ್ಲದರೊಂದಿಗೆ ಜನರೂ ಕೂಡಾ ಅಲರ್ಟ್ ಆಗಿದ್ದಾರೆ. ಉಳಿದ ಕರ್ನಾಟಕದ ಭಾಗಗಳಲ್ಲಿಯೂ ಕೂಡಾ ಇಂಥಾದ್ದೇ ಎಚ್ಚರ ವಹಿಸಿದರೆ ಇರಾನಿ ಗ್ಯಾಂಗನ್ನು ಬಗ್ಗು ಬಡಿಯೋದೇನು ಕಷ್ಟದ ವಿಚಾರವಲ್ಲ.