ಇನ್ನೊಂದಷ್ಟು ವರ್ಷ ಕಳೆಯುತ್ತಲೇ ಬೆಂಗಳೂರಿನ ಬದುಕು ಮತ್ತಷ್ಟು ದುಸ್ತರವಾಗಲಿದೆಯಾ? ಇಂಥಾದ್ದೊಂದು ಪ್ರಶ್ನೆ ಹುಟ್ಟಿಕೊಂಡು ಒಂದಷ್ಟು ವರ್ಷಗಳೇ ಕಳೆದಿವೆ. ಅದರ ಜೊತೆ ಜೊತೆಗೇ ಬೆಂಗಳೂರು ಮತ್ತಷ್ಟು ನಿಗೂಢ ವಾಗುತ್ತಾ, ವಿಕ್ಷಿಪ್ತವಾಗುತ್ತಲೇ ಸಾಗುತ್ತಿದೆ. ಇಲ್ಲಿನ ಯುವಕ ಯುವತಿಯರಲ್ಲಿ ಒಂದಷ್ಟು ಮಂದಿ ಈಗಾಗಲೇ ನಶೆಯ ಜಗತ್ತಿಗೆ ಶರಣೆಂದಿದ್ದಾರೆ. ತೀರಾ ಕಟ್ಟುನಿಟ್ಟಿನ ನೀತಿ ನಿಯಮಾವಳಿ ಜಾರಿಯಿರುವ ಶಾಲಾ ಕಾಲೇಜುಗಳಲ್ಲಿ ಕೂಡಾ ಕುಂತಲ್ಲೇ ಕೈಚಾಚಿದರೂ ಸಲೀಸಾಗಿಯೇ ಬೇಕಿನ್ನಿಸಿದ ಬ್ರಾಂಡಿನ ಡ್ರಗ್ಸ್ ಸಿಗುವಂಥಾ ವಾತಾವರಣವಿದೆ. ಡ್ರಗ್ಸ್ ಚಟಕ್ಕೆ ತುತ್ತಾದವರನ್ನು ಹಾದಿ ಬಿಟ್ಟವರೆಂದು ಜರಿದು ಸುಮ್ಮನಾಗುವುದು ಸಲೀಸಿನ ಸಂಗತಿ. ಆದರೆ ಅದೆಂಥಾ ಮಡಿವಂತಿಕೆಯ ಕೋಟೆಯನ್ನಾದರೂ ಬೇಧಿಸಿ ಒಳ ನುಗ್ಗಿ ಬಿಡುವಂಥಾ ತೀವ್ರ ಸ್ವರೂಪದಲ್ಲಿ ಡ್ರಗ್ಸ್ ದಂಧೆ ಬೆಳೆದು ನಿಂತಿದೆ. ಯಾವುದು ನಿಶೇಧಿತವೋ ಅಂಥಾದ್ದರ ಕಡೆಗೇ ಹೆಚ್ಚು ಆಕರ್ಷಿತಗೊಳ್ಳುವ ಎಳೇ ಮನಸುಗಳಿರುವ ಶಾಲಾ ಕಾಲೇಜುಗಳಲ್ಲಿಯೂ ಈವತ್ತಿಗೆ ಮಾದಕ ವಸ್ತುಗಳು ಅತ್ಯಂತ ಸಲೀಸಾಗಿಯೇ ಸಿಗುತ್ತಿದೆ.
ಇಂದು ನೈಜೀರಿಯಾ, ಆಫ್ರಿಕಾ, ಸೊಮಾಲಿಯಾದಂಥ ದೇಶಗಳ ವಿದ್ಯಾರ್ಥಿಗಳು ಬೆಂಗಳೂರಲ್ಲಿ ಓದಲು ಬಂದರೆ, ಅಂಥವರ ಆರ್ಥಿಕ ಸ್ಥಿತಿಯನ್ನೇ ಎನ್ಕ್ಯಾಶ್ ಮಾಡಿಕೊಂಡು ಡೀಲರುಗಳಾಗಿ ಪಳಗಿಸಿಕೊಳ್ಳುವ ಪ್ರಳಯಾಂತಕ ಐಡಿಯಾವನ್ನು ಅಂತಾರಾಷ್ಟ್ರೀಯ ಡ್ರಗ್ಸ್ ಮಾಫಿಯಾ ಕಂಡುಕೊಂಡಿದೆ. ಸಿಲಿಕಾನ್ ಸಿಟಿ, ಉದ್ಯಾನ ನಗರಿ ಎಂದೆಲ್ಲಾ ಜಾಗತಿಕ ಮಟ್ಟದಲ್ಲಿ ಖ್ಯಾತಿ ಹೊಂದಿರುವ ಬೆಂಗಳೂರು ನಗರಕ್ಕೆ ಮಾದಕದ್ರವ್ಯ ಲೋಕದಲ್ಲಿ ಬಳಕೆಯಲ್ಲಿರುವ ಹೆಸರು ಡ್ರಗ್ಸ್ ಯಾರ್ಡ್ ಆಫ್ ಕರ್ನಾಟಕ. ಈ ಕಳಂಕ ರಾಜಧಾನಿಗೆ ಸುಮ್ಮನೆ ಮೆತ್ತಿಕೊಂಡಿಲ್ಲ. ದೇಶ ವಿದೇಶಗಳ ಡ್ರಗ್ ಪೆಡ್ಲರ್ಗಳೊಂದಿಗೆ ನೇರ ಸಂಪರ್ಕ ಹೊಂದಿರುವ ಬೆಂಗಳೂರಿನ ಡ್ರಗ್ ಮಾಫಿಯಾ ವಾರ್ಷಿಕ ಕೋಟಿಗಟ್ಟಲೆ ಮೌಲ್ಯದ ಮಾದಕದ್ರವ್ಯವವನ್ನು ಅಮದು ಮಾಡಿಕೊಂಡು ಅನಂತರ ರಾಜ್ಯದಲ್ಲಿ ಬೇಡಿಕೆ ಇರುವ ನಗರಗಳಿಗೆ ಕಳುಹಿಸುವ ವ್ಯವಸ್ಥಿತ ಜಾಲದ ಹೃದಯವನ್ನಾಗಿ ಈ ನಗರವನ್ನು ಬಳಸಿಕೊಳ್ಳುತ್ತಿದೆ. ಇದಕ್ಕೆ ಸಾಕ್ಷಿ ಕಳೆದ ಮೂರು ವರ್ಷಗಳಲ್ಲಿ ೭ಂಂ ಕೆ.ಜಿ. ಡ್ರಗ್ಸ್ ಜಪ್ತಿಯಾಗಿರುವ ಬಗ್ಗೆ ರಾಜ್ಯ ಪೊಲೀಸ್ ಇಲಾಖೆ ಅಧಿಕೃತ ದಾಖಲೆಗಳಿಂದಲೇ ಸಿಗುತ್ತದೆ. ಹಿರಿಯ ಪೊಲೀಸ್ ಅಧಿಕಾರಿಗಳ ಪ್ರಕಾರ ಇದು ಅಧಿಕೃತವಾಗಿ ಜಪ್ತಿಯಾದ ಮಾದಕವಸ್ತುಗಳ ಪ್ರಮಾಣ ಮಾತ್ರ. ಇದರ ನೂರು ಪಟ್ಟು ರಾಜ್ಯದಲ್ಲಿ ಬಳಕೆಯಾಗುತ್ತಿರಬಹುದು ಎಂದು ಅಂದಾಜಿಸುತ್ತಾರೆ. ಈ ಮಾತನ್ನು ನಂಬುವುದಾದರೇ ಕರ್ನಾಟಕದಲ್ಲಿ ಡ್ರಗ್ ದಂಧೆ ಕೋಟ್ಯಾಂತರ ರೂ. ಮೌಲ್ಯದ ಉದ್ದಿಮೆಯಾಗೆ ಬೆಳೆದುಕೊಂಡಿದೆ.
ಈವತ್ತು ಬೆಂಗಳೂರಿನಲ್ಲಿ ಬೀಡು ಬಿಟ್ಟಿರುವುದು ಅಂತಾರಾಷ್ಟ್ರೀಯ ಡ್ರಗ್ಸ್ ಜಾಲ. ಇದರ ಗ್ರಾಹಕರು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳೇ ಎಂಬುದು ನಿಜಕ್ಕೂ ಬೆಚ್ಚಿ ಬೀಳಿಸುವ ವಾಸ್ತವ. ಕೇಲವ ಬೆಂಗಳೂರು ಮಾತ್ರ ಡ್ರಗ್ಸ್ ದಾವಾನಲ ಅಂದುಕೊಂಡರೆ ಅದು ಸುಳ್ಳು. ಇದು ಈ ದಂಧೆಗ ಕೇಂದ್ರ ಸ್ಥಾನವಷ್ಟೇ. ಇಲ್ಲಿಂದಲೇ ಹುಬ್ಬಳ್ಳಿ, ಧಾರವಾಡ, ಮಂಗಳೂರು, ಶಿವಮೊಗ್ಗದಂಥಾ ಊರುಗಳಿಗೂ ರವಾನೆಯಾಗುತ್ತಿದೆ. ಆ ಏರಿಯಾಗಳಲ್ಲಿಯೂ ಸಹ ಇದಕ್ಕೆ ಶಾಲಾ ಕಾಲೇಜು ವಿದ್ಯಾರ್ಥಿಗಳೇ ಗ್ರಾಹಕರು. ವಯೋಸಹಜ ಕೌತುಕದಿಂದ ಒಂದು ಬಾರಿ ಮಾದಕ ವಸ್ತುಗಳ ಚಟಕ್ಕೆ ಬಿದ್ದವರು ಅದು ಸಿಕ್ಕರೂ, ಸಿಗದಿದ್ದರೂ ರಾಕ್ಷಸರಾಗಿ ಬಿಡುತ್ತಾರೆ. ಈ ಅಮಲಿಗೆ ಕೇವಲ ಹುಡುಗರು ಮಾತ್ರವಲ್ಲದೇ ಹುಡುಗೀರೂ ಬಲಿ ಬೀಳುತ್ತಿರುವುದು ಕಠೋರ ಸತ್ಯ. ಇದಕ್ಕೆ ವರ್ಷದ ಹಿಂದೆ ಆತ್ಮಹತ್ಯೆ ಮಾಡಿಕೊಂಡ ಮಂಗಳೂರಿನ ಹುಡುಗಿಯೇ ಸಾಕ್ಷಿ.