ಬದುಕೋದಕ್ಕೆ ನಾನಾ ದಾರಿಗಳಿವೆ. ಕೊಂಚ ಕಷ್ಟವಾದರೂ ಕೂಡಾ ಸರಿದಾರಿಯಲ್ಲಿ ನಡೆದು ಹಾಳಾದೋರು ಕಡಿಮೆ. ಆದರೆ ಅಡ್ಡಹಾದಿಯ ಘೋರ ಪರಿಣಾಮಗಳು ಕಣ್ಣೆದುರೇ ಇದ್ದರೂ ಹೆಚ್ಚಿನ ಜನ ಸರಿದಾರಿಯಲ್ಲಿ ಹೆಜ್ಜೆಯಿರಿಸಲು ಹಿಂದೆ ಮುಂದೆ ನೋಡುತ್ತಾರೆ. ಹೇಗಾದರೂ ಮಾಡಿ ಬೇಗನೆ ಕಾಸು ಸಂಪಾದಿಸಬೇಕೆಂಬ ಅವಸರದಲ್ಲಿ ಕಳ್ಳತನದಂಥಾ ಹಾದಿ ಹಿಡಿಯುವವರೂ ಇದ್ದಾರೆ. ಇಡೀ ಪ್ರಪಂಚದ ತುಂಬೆಲ್ಲ ಇಂಥ ಅಡ್ಡಕಸುಬಿಗಳ ಸಂಖ್ಯೆ ಮಿತಿ ಮೀರಿಕೊಂಡಿದೆ. ಹೀಗೆ ಕಳ್ಳತನಕ್ಕಿಳಿದವರಲ್ಲಿ ಎಂತೆಂಥಾ ಚಾಲಾಕಿಗಳಿದ್ದಾರೆಂದರೆ ನುರಿತ ಪೊಲೀಸ್ ಅಧಿಕಾರಿಗಳೇ ಅಂಥವರ ಆಟಗಳ ಮುಂದೆ ತಬ್ಬಿಬ್ಬುಗೊಂಡಿದ್ದಿದೆ.
ಜಗತ್ತಿನಲ್ಲಿ ಚಾಲಾಕಿ ಕಳ್ಳರ ರಸವತ್ತಾದ ಅನೇಕ ಕಥೆಗಳಿದ್ದಾವೆ. ಎಂಥವರನ್ನೂ ಯಾಮಾರಿಸಿ ಕದ್ದು ಬಿಡುವ, ಪೊಲೀಸರ ಕಣ್ಣು ತಪ್ಪಿಸಲೆಂದೇ ಬುದ್ಧಿವಂತಿಕೆಯ ರೂಟು ಕಂಡುಕೊಂಡಿರೋ ಅನೇಕ ಕಳ್ಳರಿದ್ದಾರೆ. ಆದರೆ ಬಾಂಬೆಯ ಐನಾತಿ ಕಳ್ಳನೊಬ್ಬ ಚೈನು ಕದ್ದು ಪೊಲೀಸರಿಂದ ತಪ್ಪಿಸಿಕೊಳ್ಳಲು ಮಾಡಿದ ಸರ್ಕಸ್ಸು ಮಾತ್ರ ತುಂಬಾನೇ ವಿಚಿತ್ರ. ಆತ ಮುಂಬೈನ ನಾನಾ ಕಡೆಗಳಲ್ಲಿ ಚಿನ್ನದ ಚೈನುಗಳನ್ನು ಎಗರಿಸುತ್ತಿದ್ದ. ಈ ಬಗ್ಗೆ ದಿನ ನಿತ್ಯ ಹತ್ತಾರು ಕೇಸುಗಳು ನಾನಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆಯಲಾರಂಭಿಸಿದ್ದವು.
ಆ ಕಳ್ಳನನ್ನು ಹೇಗಾದ್ರೂ ಹಿಡಿಯಲೇ ಬೇಕೆಂದು ವಿಶೇಷ ತಂಡವೂ ರಚನೆಯಾಗಿತ್ತು. ಅಧಿಕಾರಿಗಳು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾದು ಕೂತು, ಕಾರ್ಯಾಚರಣೆ ನಡೆಸಿ ಕಡೆಗೂ ಆತನನ್ನು ರೆಡ್ ಹ್ಯಾಂಡಾಗಿ ಬಂಧಿಸಿದ್ದರು. ಆದರೆ ಆ ಐನಾತಿ ಪೊಲೀಸರ ಬಲೆಗೆ ಬೀಳೋ ಸೂಚನೆ ಸಿಗುತ್ತಲೇ ಫೆಶ್ ಆಗಿ ಕದ್ದಿದ್ದ ಮಣ ಭಾರದ ಚೈನನ್ನು ಸಲೀಸಾಗಿ ನುಂಗಿದ್ದ. ಪಿತ್ಥ ಕೆದರಿಸಿಕೊಂಡ ಪೊಲೀಸರು ಒಂದು ಬುಟ್ಟಿಯ ತುಂಬಾ ಬಾಳೆ ಹಣ್ಣುಗಳನ್ನಿಟ್ಟು ಒತ್ತಾಯಪೂರ್ವಕವಾಗಿ ಆತನಿಗೆ ತಿನ್ನಿಸಿದ್ದರು. ಪೊಲೀಸರ ಭಯಕ್ಕೆ ಆತ ಬರೋಬ್ಬರಿ ನಲವತ್ತೆಂಟು ಬಾಳೆ ಹಣ್ಣು ತಿಂದಿದ್ದ. ಈ ಪಾಟಿ ಬಾಳೆ ಹಣ್ಣು ತಿಂದ ಮೇಲೆ ಆತ ವಿಸರ್ಜಿಸೋದನ್ನೇ ಕಾದು ಕೂತ ಪೊಲೀಸರು ಕಡೆಗೂ ಮಲದಿಂದ ಕದ್ದ ಚಿನ್ನದ ಚೈನನ್ನು ಆಯ್ದುಕೊಂಡು ವಶಪಡಿಸಿಕೊಳ್ಳಬೇಕಾಯ್ತು!